”ಧಾರವಾಡ ಲೈನ್ ಬಜಾರ್ ಕಳ್ಳತನ ಕೇಸ್ ಫಿನಿಶ್: 1.5 ಕೆಜಿ ಬೆಳ್ಳಿ ಜಪ್ತಿ, ಕಿತ್ತೂರಿನ ಕಿರಾತಕ ಅರೆಸ್ಟ್!”
ಧಾರವಾಡ: ನಗರದ ಲೈನ್ ಬಜಾರ್ನಲ್ಲಿರುವ ಶ್ರೀ ಶೀತಲನಾಥ ಜೈನ ಮಂದಿರದಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಧಾರವಾಡ ಶಹರ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರ ಜಿಲ್ಲಾ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಆತನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳ್ಳಿ ಆಭರಣ ಹಾಗೂ ನಗದನ್ನು ವಶಪಡಿಸಿಕೊಂಡಿದ್ದಾರೆ.
ಕಳೆದ ಜನವರಿ 19 ಮತ್ತು 20ರ ಮಧ್ಯರಾತ್ರಿ ಮಂದಿರದ ಬೀಗ ಮುರಿದು ಒಳನುಗ್ಗಿದ್ದ ಕಳ್ಳರು, ಕಾಣಿಕೆ ಪೆಟ್ಟಿಗೆಯನ್ನು ಹಾನಿಗೊಳಿಸಿ ನಗದು ಹಣ ಹಾಗೂ ಬೆಳ್ಳಿಯ ಆಭರಣಗಳನ್ನು ದೋಚಿದ್ದರು. ಈ ಕುರಿತು ಧಾರವಾಡ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಹುಣಸಿಕಟ್ಟಿ ಮೂಲದ, ಸದ್ಯ ಧಾರವಾಡದ ಟಿಕಾರೆ ರೋಡ್ ಮಹಾವೀರ ಪ್ಲಾಜಾದಲ್ಲಿ ವಾಚ್ಮನ್ ಕೆಲಸ ಮಾಡುತ್ತಿದ್ದ ಮಲ್ಲಪ್ಪ ಅಲಿಯಾಸ್ ಮಲ್ಲೇಶ ಬಸಪ್ಪ ಅಕಮಡ್ಡಿ (31) ಬಂಧಿತ ಆರೋಪಿ. ಬಂಧಿತನಿಂದ 1565 ಗ್ರಾಂ ಬೆಳ್ಳಿ ಆಭರಣ ಹಾಗೂ 30,274 ರೂ. ನಗದು ಸೇರಿದಂತೆ ಒಟ್ಟು 3,40,474 ರೂ. ಕಿಮ್ಮತ್ತಿನ ಮಾಲನ್ನು ವಶಪಡಿಸಿಕೊಳ್ಳಲಾಗಿದೆ.
ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾದ ಎನ್. ಶಶಿಕುಮಾರ್, ಡಿಸಿಪಿಗಳಾದ ಮಹಾನಿಂಗ ನಂದಗಾವಿ ಹಾಗೂ ರವೀಶ್ ಸಿ.ಆರ್. ಮತ್ತು ಎಸಿಪಿ ಪ್ರಶಾಂತ ಸಿದ್ದನಗೌಡ್ರ ಅವರ ಮಾರ್ಗದರ್ಶನದಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆದಿದೆ.
ಕಾರ್ಯಾಚರಣೆಯಲ್ಲಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿ
ತನಿಖಾ ತಂಡದ ನೇತೃತ್ವವನ್ನು ಇನ್ಸ್ಪೆಕ್ಟರ್ ಗುರುನಾಥ ಚವ್ಹಾಣ ವಹಿಸಿದ್ದರು. ಇವರಿಗೆ ಪಿಎಸ್ಐಗಳಾದ ವಿನೋಧ ಡಿ., ಆರ್.ಹೆಚ್. ನದಾಫ, ಮತ್ತು ತಾಂತ್ರಿಕ ವಿಭಾಗದ ಪಿಎಸ್ಐ ಸುನೀಲ ಎಮ್. ಸಾಥ್ ನೀಡಿದ್ದರು.
ಪೊಲೀಸ್ ಸಿಬ್ಬಂದಿಗಳಾದ ಐ.ಪಿ. ಬುರ್ಜಿ, ಆರ್.ಎಸ್. ಪಾಟೀಲ, ಡಿ.ಕೆ. ನದಾಫ, ಪಿ.ಎಸ್. ತಿರ್ಲಾಪೂರ, ಸಂತೋಷ ಪೂಜಾರ, ಜಿ.ಎಮ್. ಕೊಪ್ಪದ, ಬಿ.ಎಲ್. ಹನಮಣ್ಣವರ, ಎಂ.ಆರ್. ಜ್ಯಾಲಿ ಹಾಗೂ ತಾಂತ್ರಿಕ ವಿಭಾಗದ ಎಂ.ಎಸ್. ಚಿಕ್ಕಮಠ, ಆರ್.ಕೆ. ಭಡಂಕರ ಮತ್ತು ಆರ್.ಎಸ್. ಗೋಮಪ್ಪನವರ ತಂಡವು ಶ್ರಮವಹಿಸಿ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ.
ಪೊಲೀಸ್ ತಂಡದ ಈ ಚಾಕಚಕ್ಯತೆಗೆ ಪೊಲೀಸ್ ಆಯುಕ್ತರು ಮೆಚ್ಚುಗೆ ವ್ಯಕ್ತಪಡಿಸಿ, ಶ್ಲಾಘಿಸಿದ್ದಾರೆ.
