”ಧಾರವಾಡದಲ್ಲಿ ಮರಳು ಟಿಪ್ಪರ್ ಅಟ್ಟಹಾಸ: ಬ್ರೇಕ್ ಫೇಲ್ ಆಗಿ ವಾಹನಗಳ ಮೇಲೆ ಹರಿದ ಯಮರೂಪಿ ವಾಹನ!”
ಧಾರವಾಡ: ನಗರದ ಮರಾಠಾ ಕಾಲನಿಯ ಯುನಿಟಿ ಆಸ್ಪತ್ರೆ ಸಮೀಪ ಶನಿವಾರ ಬೆಳಿಗ್ಗೆ ಮರಳು ತುಂಬಿದ ಟಿಪ್ಪರ್ವೊಂದು ಬ್ರೇಕ್ ಫೇಲ್ ಆದ ಪರಿಣಾಮ ಸರಣಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಒಂದು ಕಾರು ಹಾಗೂ ಮೂರು ಬೈಕ್ಗಳು ಜಖಂಗೊಂಡಿದ್ದು, ಅದೃಷ್ಟವಶಾತ್ ದೊಡ್ಡ ಮಟ್ಟದ ಪ್ರಾಣಾಪಾಯ ತಪ್ಪಿದೆ.
ಶನಿವಾರ ಬೆಳಿಗ್ಗೆ ಮರಳು ತುಂಬಿದ ಟಿಪ್ಪರ್ ಮರಾಠಾ ಕಾಲನಿ ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ ಹಠಾತ್ ತಾಂತ್ರಿಕ ದೋಷ ಕಾಣಿಸಿಕೊಂಡು ಬ್ರೇಕ್ ವೈಫಲ್ಯವಾಗಿದೆ. ಈ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಟಿಪ್ಪರ್, ರಸ್ತೆ ಬದಿಯಲ್ಲಿ ನಿಂತಿದ್ದ ಹಾಗೂ ಚಲಿಸುತ್ತಿದ್ದ ಒಂದು ಕಾರು ಮತ್ತು ಮೂರು ಬೈಕ್ಗಳಿಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವಾಹನಗಳು ಪಲ್ಟಿಯಾಗಿದ್ದು, ಸಾರ್ವಜನಿಕರು ಆತಂಕದಿಂದ ಓಡುವಂತಾಯಿತು.
ಅಪಘಾತ ಸಂಭವಿಸುತ್ತಿದ್ದಂತೆಯೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸಂಚಾರಿ ಠಾಣೆಯ ಪೊಲೀಸರು ವಾಹನಗಳ ತೆರವು ಕಾರ್ಯಾಚರಣೆ ನಡೆಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಘಟನೆಗೆ ಸಂಬಂಧಿಸಿದಂತೆ ಟಿಪ್ಪರ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.
