Posts Slider

Karnataka Voice

Latest Kannada News

ಹುಬ್ಬಳ್ಳಿ: “ನೀವ್ ಕಾರ್ಪೋರೇಟರ್ ಆಗಬೇಕಿತ್ತ್”- “ಮಹಿಳಾ ಇತ್ತ್” ಸ್ಥಳೀಯರ ಸಮ್ಮುಖದಲ್ಲಿ ಮಡದಿಗೆ “ಗಿಳಿ ಪಾಠ”…

Spread the love

ಸಾಗರ ಕಾಲೋನಿ ಸಿಸಿ ರಸ್ತೆ ಕಾಮಗಾರಿ ಕಳಪೆ: ಕಾರ್ಪೋರೇಟರ್‌ಗೆ ಸ್ಥಳೀಯರ ತರಾಟೆ

ಹುಬ್ಬಳ್ಳಿ: ನಗರದ ಸಾಗರ ಕಾಲೋನಿಯಲ್ಲಿ ಹದಗೆಟ್ಟಿರುವ ರಸ್ತೆಗಳ ದುರಸ್ತಿಗೆ ಬಂದ 50 ಲಕ್ಷ ರೂಪಾಯಿ ಅನುದಾನದಲ್ಲಿ ಕಳಪೆ ಕಾಮಗಾರಿ ನಡೆಸಲಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಮಗಾರಿ ವೀಕ್ಷಣೆಗಾಗಿ ಆಗಮಿಸಿದ್ದ ವಾರ್ಡ್ ಸದಸ್ಯೆ ಸೀಮಾ ಮೊಗಲಿಶೆಟ್ಟರ್ ಅವರನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆಯಿತು.

ಸಾಗರ ಕಾಲೋನಿಯಲ್ಲಿ ಬಹುತೇಕ ರಸ್ತೆಗಳು ಕಿತ್ತೋಗಿದ್ದು, ಪ್ರತಿ ಮಳೆಗಾಲದಲ್ಲಿ ನಿವಾಸಿಗಳು ಕೆಸರು ಗದ್ದೆಯಂತಾಗುವ ರಸ್ತೆಯಲ್ಲಿ ಓಡಾಡಲು ಪರದಾಡುವಂತಾಗಿದೆ. ಈ ದೀರ್ಘಕಾಲದ ಸಮಸ್ಯೆಗೆ ಪರಿಹಾರವಾಗಿ ವಾರ್ಡ್ ಸದಸ್ಯೆ ಸೀಮಾ ಮೊಗಲಿಶೆಟ್ಟರ್ ಅವರು 50 ಲಕ್ಷ ರೂ. ಅನುದಾನದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದ್ದರು.

ಪ್ರಸ್ತುತ ನಡೆಯುತ್ತಿರುವ ರಸ್ತೆ ನಿರ್ಮಾಣ ಕಾಮಗಾರಿಯು ತೀರಾ ಕಳಪೆಯಾಗಿದೆ ಎಂಬುದು ನಿವಾಸಿಗಳ ದೂರು. “ಸಿಸಿ ರಸ್ತೆ ಮಾಡುವಾಗ ಅನುಸರಿಸಬೇಕಾದ ತಾಂತ್ರಿಕ ಕ್ರಮಗಳನ್ನು ಗುತ್ತಿಗೆದಾರರು ಪಾಲಿಸುತ್ತಿಲ್ಲ. ನಾಮಕಾವಸ್ಥೆಗೆ ಕಾಮಗಾರಿ ಮಾಡಲಾಗುತ್ತಿದೆ. ನಿಯಮದಂತೆ 6 ಇಂಚು ಕಾಂಕ್ರೀಟ್ ಇರಬೇಕಾದ ಜಾಗದಲ್ಲಿ ಕೇವಲ 5 ಇಂಚು, ಕೆಲವು ಕಡೆಗಳಲ್ಲಿ ಕೇವಲ 2 ಇಂಚು ಕಾಂಕ್ರೀಟ್ ಹಾಕಿ ಕೈತೊಳೆದುಕೊಳ್ಳಲಾಗುತ್ತಿದೆ” ಎಂದು ಸ್ಥಳೀಯರು ನೇರವಾಗಿ ಕಾರ್ಪೋರೇಟರ್‌ಗೆ ದೂರಿದರು. ಅಲ್ಲದೆ, ಉಳಿದಿರುವ ಕಾಂಕ್ರೀಟ್ ಅನ್ನು ಪಕ್ಕದ ರಸ್ತೆಗೆ ಹಾಕಿ ಸರಿಪಡಿಸುವಂತೆಯೂ ಒತ್ತಾಯಿಸಿದರು.

ರಸ್ತೆಯ ಸ್ಥಿತಿಗತಿ ನೋಡಲು ಬಂದ ಕಾರ್ಪೋರೇಟರ್ ಅವರೊಂದಿಗೆ ಸ್ಥಳೀಯರು ವಾಗ್ವಾದಕ್ಕಿಳಿದರು. “ಕಾಮಗಾರಿ ಮುಗಿಯುತ್ತಾ ಬಂದರೂ ನೀವು ಈಗ ವೀಕ್ಷಣೆಗೆ ಬಂದಿದ್ದೀರಿ, ಕಳಪೆ ಕಾಮಗಾರಿ ನಡೆಯುತ್ತಿದ್ದರೂ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುತ್ತಿಲ್ಲ” ಎಂದು ಜನರು ಆಕ್ರೋಶ ಹೊರಹಾಕಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಪೋರೇಟರ್ ಸೀಮಾ ಮೊಗಲಿಶೆಟ್ಟರ್, “ಸಮಸ್ಯೆಗೆ ತಕ್ಷಣ ಸ್ಪಂದಿಸಲಾಗುವುದು. ಕಾಮಗಾರಿಯಲ್ಲಿ ಲೋಪಗಳಿದ್ದರೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚಿಸಿ ತಕ್ಷಣ ಸರಿಪಡಿಸಲಾಗುವುದು” ಎಂದು ಭರವಸೆ ನೀಡಿದರು.

​ಬಂದ ಅನುದಾನವು ಜನೋಪಯೋಗಿ ಕೆಲಸಕ್ಕೆ ಬಳಕೆಯಾಗಲಿ, ಕಳಪೆ ರಸ್ತೆ ನಿರ್ಮಿಸಿ ಸಾರ್ವಜನಿಕರ ಹಣ ವ್ಯರ್ಥ ಮಾಡಬೇಡಿ ಎಂಬುದು ಕಾಲೋನಿ ನಿವಾಸಿಗಳ ಕಟು ಆಗ್ರಹವಾಗಿದೆ.


Spread the love

Leave a Reply

Your email address will not be published. Required fields are marked *