ಭದ್ರಾಪೂರದಲ್ಲಿ ಹೂತಿದ್ದ NWKSRTC ಡ್ರೈವರ್ ಶವ ಹೊರಕ್ಕೆ… ಹೆಂಡತಿಯೇ ಕೊಲೆಗಾರ್ತಿ…!?
ಹೃದಯಾಘಾತವಲ್ಲ ಅದು ಕೊಲೆ? ಹೂತಿದ್ದ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ!
ಧಾರವಾಡ: ಕಳೆದ ನವೆಂಬರ್ನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ನಂಬಿ ಅಂತ್ಯಸಂಸ್ಕಾರ ಮಾಡಲಾಗಿದ್ದ ವ್ಯಕ್ತಿಯ ಸಾವಿನ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ಪೋಷಕರ ದೂರಿನ ಮೇರೆಗೆ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಭದ್ರಾಪುರದಲ್ಲಿ ಹೂತಿದ್ದ ಶವವನ್ನು ಬುಧವಾರ ತಹಶೀಲ್ದಾರ್ ಸಮ್ಮುಖದಲ್ಲಿ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಘಟನೆಯ ಹಿನ್ನೆಲೆ: NWKSRTC ಚಾಲಕರಾಗಿದ್ದ ಬಾಬಾಜಾನ್ ಚಿನ್ನೂರು (51) ಕಳೆದ ನವೆಂಬರ್ 11 ರಂದು ಧಾರವಾಡದಲ್ಲಿ ಸಾವನ್ನಪ್ಪಿದ್ದರು. ಅಂದು ಕುಟುಂಬಸ್ಥರು ಇದು ಹೃದಯಾಘಾತ ಎಂದು ಭಾವಿಸಿ ಸ್ವಗ್ರಾಮ ಭದ್ರಾಪುರದಲ್ಲಿ ತರಾತುರಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದ್ದರು.
ಸೊಸೆಯ ಮೇಲೆ ಅನುಮಾನ: ದಿನಗಳು ಕಳೆದಂತೆ ಬಾಬಾಜಾನ್ ಅವರ ಪತ್ನಿ ವಹಿದಾಬಿ ನಡವಳಿಕೆಯ ಮೇಲೆ ಪೋಷಕರಿಗೆ ಅನುಮಾನ ಶುರುವಾಗಿದೆ. ತನ್ನ ಮಗನದ್ದು ಸಹಜ ಸಾವಲ್ಲ, ಯಾವುದೋ ದುರುದ್ದೇಶದಿಂದ ಸೊಸೆಯೇ ಹತ್ಯೆ ಮಾಡಿದ್ದಾಳೆ ಎಂದು ಆರೋಪಿಸಿ ಪೋಷಕರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದರು. ಅಂದು ಮರಣೋತ್ತರ ಪರೀಕ್ಷೆ ನಡೆಸದ ಕಾರಣ ಸಾವಿನ ರಹಸ್ಯ ನಿಗೂಢವಾಗಿಯೇ ಉಳಿದಿತ್ತು.
ತನಿಖೆ ಚುರುಕು: ದೂರನ್ನು ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು, ಇಂದು ಸ್ಮಶಾನದಲ್ಲಿ ಹೂತಿದ್ದ ಶವವನ್ನು ಹೊರತೆಗೆದು ಸ್ಥಳದಲ್ಲೇ ಮರಣೋತ್ತರ ಪರೀಕ್ಷೆಗೆ ಸಿದ್ಧತೆ ನಡೆಸಿದ್ದಾರೆ. ವರದಿ ಬಂದ ಬಳಿಕವಷ್ಟೇ ಬಾಬಾಜಾನ್ ಅವರದ್ದು ಹತ್ಯೆಯೋ ಅಥವಾ ನೈಸರ್ಗಿಕ ಸಾವೋ ಎಂಬ ಸತ್ಯ ಹೊರಬರಲಿದೆ.
