ಹೋದ ಸಲಕ್ಕಿಂತಲೂ ಈ ಬಾರಿ ಹೆಚ್ಚು ಮತದಿಂದ “ಗೆಲ್ಲುವೆ”: ಪ್ರಲ್ಹಾದ ಜೋಶಿ “ವಿಶ್ವಾಸ”..!!!
1 min readಹುಬ್ಬಳ್ಳಿ: ಲೋಕಸಭೆ ಚುನಾವಣೆಯಲ್ಲಿ ಬಹುದೊಡ್ಡ ಮಾರ್ಜಿನ್ ಅಲ್ಲೇ ಗೆಲ್ಲುವೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.
ಹುಬ್ಬಳ್ಳಿಯಲ್ಲಿ ಇಂದು ಪತ್ರಕರ್ತರೊಂದಿಗೆ ಮಾತನಾಡಿ, ಕಳೆದ ಬಾರಿಗಿಂತ ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾಗುತ್ತೇನೆ ಎಂದು ಪ್ರತಿಕ್ರಿಯಿಸಿದರು.
ಪ್ರಸಕ್ತ ಲೋಕಸಭೆ ಚುನಾವಣೆಯಲ್ಲೂ ಮತದಾರರು ನನ್ನ ಪರವಾಗಿದ್ದಾರೆ. ಹಾಗಾಗಿ ಒಳ್ಳೇ ಮಾರ್ಜಿನ್ ಅಲ್ಲಿ ಗೆಲುವು ಲಭಿಸಲಿದೆ ಎಂದರು.
ದೇವರು ಒಳ್ಳೇದು ಮಾಡುತ್ತಾನೆ ಹೊರತು ಕೆಟ್ಟದ್ದಲ್ಲ: ಕಾಂಗ್ರೆಸ್ ಸೋಲಿಗೆ ಕೇರಳದಲ್ಲಿ ಭೈರವಿ ಯಾಗ ಮಾಡಿಸಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವ ಜೋಶಿ, ದೇವರು ಒಳ್ಳೆಯದನ್ನು ಮಾಡುತ್ತಾನೆ ಹೊರತು ಕೆಟ್ಟದ್ದನ್ನಲ್ಲ ಎಂದು ಕಾಂಗ್ರೆಸ್ ಗೆ ತಿರುಗೇಟು ಕೊಟ್ಟರು.
ಯಾರೇ ಆಗಲಿ ತಾವು ಗೆಲ್ಲಬೇಕೆಂದು ಪೂಜೆ, ಪುನಸ್ಕಾರ ಮಾಡುತ್ತಾರೆ ವಿನಃ ಮತ್ತೊಬ್ಬರು ನಾಶವಾಗಲಿ ಎಂದಲ್ಲ. ದೇವರು ಕೆಡುಕು ಮಾಡುವುದಾದರೆ ಯಾರೂ ಪೂಜಿಸುವುದಿಲ್ಲ. ಕಾಂಗ್ರೆಸ್ಸಿಗರಿಗೆ ಆ ಭಯ ಏಕೆ? ಎಂದರು.
ಪ್ರಜ್ವಲ್ ರೇವಣ್ಣ ಕ್ಷಮೆಗೆ ಅರ್ಹರಲ್ಲ;
ಕಾನೂನು ರೀತಿ ಅತ್ಯುಗ್ರ ಶಿಕ್ಷೆಯಾಗಲಿ
ಪ್ರಜ್ವಲ್ ರೇವಣ್ಣ ಕ್ಷಮೆಗೆ ಅರ್ಹರಲ್ಲ. ಪೆನ್ ಡ್ರೈವ್ ಪ್ರಕರಣದಲ್ಲಿ ಕಟ್ಟುನಿಟ್ಟಿನ ತನಿಖೆ ನಡೆಸಿ ಅತ್ಯುಗ್ರವಾದಂತಹ ಶಿಕ್ಷೆ ವಿಧಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಪ್ರಜ್ವಲ್ ರೇವಣ್ಣ ಯಾವ ಕಾರಣಕ್ಕಾಗಿ ರಾಜ್ಯದ ಜನರ ಕ್ಷಮೆ ಕೇಳಿದ್ದಾರೋ ಗೊತ್ತಿಲ್ಲ. ಆದರೆ, ಅವರು ಕ್ಷಮೆಗೆ ಅರ್ಹರಲ್ಲ ಎಂದು ಸ್ಪಷ್ಟಪಡಿಸಿದರು.
ಹೇಸಿಗೆ ತರುತ್ತದೆ: ಮಹಿಳೆಯರನ್ನು ಉನ್ನತ ಸ್ಥಾನದಲ್ಲಿರಿಸಿ, ಅತ್ಯಂತ ಗೌರವದಿಂದ ನೋಡುವ ಭಾರತ ದೇಶದಲ್ಲಿ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ಹೇಸಿಗೆ ತರಿಸುವ ಕೆಲಸ ಎಂದು ಜೋಶಿ ತೀವ್ರವಾಗಿ ಖಂಡಿಸಿದರು.
ಪೆನ್ ಡ್ರೈವ್ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಇದುವರೆಗೆ ನಡೆದುಕೊಂಡ ರೀತಿ ಅಕ್ಷಮ್ಯ. ಸಂತ್ರಸ್ತರ ಕ್ಷಮೆ ಕೇಳುತ್ತಾರೋ, ಬಿಡುತ್ತಾರೋ ಆದರೆ, ಇದೊಂದು ಘನಘೋರ ಕೃತ್ಯವಾಗಿದ್ದರಿಂದ ಕಾನೂನು ರೀತಿಯಲ್ಲಿ ಶಿಕ್ಷೆಯಾಗಲೇಬೇಕು. ಇದು ಬಿಜೆಪಿಯ ಸ್ಪಷ್ಟ ನಿಲುವಾಗಿದೆ ಎಂದು ಪ್ರಲ್ಹಾದ ಜೋಶಿ ಹೇಳಿದರು.
ಭಾರತೀಯ ನ್ಯಾಯಾಂಗ ವ್ಯವಸ್ಥೆ ಬಲಿಷ್ಠವಾಗಿದೆ. ತ್ವರಿತವಾಗಿ ಪ್ರಕರಣದ ಸಂಪೂರ್ಣ ತನಿಖೆ ನಡೆಸಿ, ಆರೋಪಿಗೆ ಶೀಘ್ರವೇ ಅತ್ಯುಗ್ರ ಶಿಕ್ಷೆ ವಿಧಿಸಬೇಕು ಎಂದು ಸಚಿವ ಜೋಶಿ ಪ್ರತಿಕ್ರಿಯಿಸಿದರು.