“ದೇಶದ್ರೋಹ ಕೇಸ್” ಖುಲಾಸೆಗೊಂಡ “ಬಡವರ ಮಗ”…
1 min readಪೊಲೀಸ್ ಹಕ್ಕುಗಳ ಹೋರಾಟಗಾರ ಬಸವರಾಜ ಕೊರವರ ಹೋರಾಟಕ್ಕೆ ಕೊನೆಗೂ ಜಯ
ಎಂಟು ವರ್ಷಗಳ ಸುದೀರ್ಘ ಕಾನೂನು ಹೋರಾಟ
ಅಂದಿನ ಕಾಂಗ್ರೆಸ್ ಸರಕಾರ ಹಾಕಿದ್ದ ರಾಜದ್ರೋಹ ಪ್ರಕರಣ ಖುಲಾಸೆ
ಸುಪ್ರೀಂಕೋರ್ಟ್ ಆದೇಶದಂತೆ ಅರ್ಜಿ ವಜಾಗೊಳಿಸಿ ಹೈಕೋರ್ಟ್ ಮಹತ್ವದ ಆದೇಶ
ಧಾರವಾಡ: ರಾಜ್ಯಾದ್ಯಂತ ಕರ್ತವ್ಯ ನಿರ್ವಹಿಸುತ್ತಿರುವ ಲಕ್ಷಾಂತರ ಪೊಲೀಸರಿಗೆ ವಾರದ ರಜೆ, ಸಂಬಳ ಹೆಚ್ಚಳ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಹೊಂದಿರುವ ರಾಘವೇಂದ್ರ ಔರಾದಕರ್ ವರದಿ ಜಾರಿಗೆ ಆಗ್ರಹಿಸಿ ಅಂದು 2016ರಲ್ಲಿ ಪೊಲೀಸ ಕುಟುಂಬದ ಸದಸ್ಯರೊಂದಿಗೆ ಉಗ್ರ ಹೋರಾಟಕ್ಕೆ ಮುಂದಾಗಿದ್ದ ಪೊಲೀಸ್ ಹಕ್ಕುಗಳ ಹೋರಾಟಗಾರ ಬಸವರಾಜ ಕೊರವರ ಹಾಗೂ ಗುರುಪಾದಯ್ಯ ಹೊಂಗಲಮಠ ಅವರ ಹೋರಾಟವನ್ನು ಹತ್ತಿಕ್ಕುವ ಉದ್ದೇಶದಿಂದ ಅಂದು ಧಾರವಾಡದ ಪೊಲೀಸರು ಕಲಾಭವನ ಮೈದಾನಕ್ಕೆ ಬರುವ ಮುನ್ನವೇ ಅವರನ್ನು ಬಂಧಿಸಿದ್ದರು.
ಅಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇವರ ಮೇಲೆ ರಾಜದ್ರೋಹದ ಪ್ರಕರಣ ದಾಖಲಿಸಿ 86 ದಿನಗಳ ಕಾಲ ಇವರನ್ನು ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿತ್ತು.
ಕೊನೆಗೂ ಸರಕಾರದ ವಿರುದ್ದ ಜೈಲಿನಲ್ಲಿಯೇ ಹಲವು ದಿನಗಳ ಕಾಲ ಉಪವಾಸ ಸತ್ಯಾಗ್ರಹವನ್ನು ಕೈಗೊಂಡು ಸರಕಾರಕ್ಕೆ ಸೆಡ್ಡು ಹೊಡೆದಿದ್ದರು. ಕೊನೆಗೆ ಮನವೊಲಿಕೆ ನಂತರ ಹೋರಾಟ ಮೊಟಕುಗೊಳಿಸಿದ್ದರು.
86 ದಿನಗಳ ಬಳಿಕ ಜಾಮೀನು ಮೇಲೆ
ಹೊರಬಂದಿದ್ದರು. ಎಂಟು ವರ್ಷಗಳ ಕಾಲ ಸುದೀರ್ಘ ಕಾನೂನು ಹೋರಾಟದ ನಂತರ ಬೆಂಗಳೂರಿನ ಎಸಿಎಂಎಂ ನ್ಯಾಯಾಲಯದ ಪ್ರಕರಣದ ವಿರುದ್ದ ಹೈಕೋರ್ಟ್ ಮೊರೆ ಹೋಗಿದ್ದರು.
ರಾಜ್ಯ ಸರ್ಕಾರದ ರಾಜದ್ರೋಹ ಪ್ರಕರಣವನ್ನು ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಇಂದು ಹೈಕೋರ್ಟ್ ರಾಜದ್ರೋಹದ ಪ್ರಕರಣವನ್ನು ವಜಾಗೊಳಿಸಿ ಮಹತ್ವದ ಆದೇಶ ಹೊರಡಿಸಿದೆ.
ಅರ್ಜಿದಾರರ ಪರ ದೀಪಕ ಶೆಟ್ಟಿ ವಾದಿಸಿದ್ದರು. ಇದನ್ನು ಪೊಲೀಸ್ ಹಕ್ಕುಗಳ ಹೋರಾಟಗಾರ ಬಸವರಾಜ ಕೊರವರ ಮುಕ್ತಕಂಠದಿಂದ ಶ್ಲಾಘಿಸಿದ್ದು, ಪೊಲೀಸರ ನ್ಯಾಯಯುತ ಬೇಡಿಕೆಗಳ ಹೋರಾಟಕ್ಕೆ ತಡವಾಗಿಯಾದರೂ ಜಯ ದೊರಕಿದೆ. ರಾಜ್ಯ ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ರಾಘವೇಂದ್ರ ಔರಾದಕರ್ ವರದಿಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಿ ಪೊಲೀಸರ ವಿವಿಧ ಬೇಡಿಕೆಯನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.