ಹೊಸವಾಳದಲ್ಲಿ “ಛಬ್ಬಿ ಕುಕ್ಕರ್” ಟೀಂ ಹೊಯ್ಕೈ… ಟೀಂ ರಗಳೆ…

ಧಾರವಾಡ: ಮಾಜಿ ಸಚಿವ ಸಂತೋಷ ಲಾಡ ಅವರು ಪ್ರತಿನಿಧಿಸುತ್ತಿರುವ ಕಲಘಟಗಿ ಕ್ಷೇತ್ರದಲ್ಲಿ ಕುಕ್ಕರ್ ಹಂಚುತ್ತಿರುವ ನಾಗರಾಜ ಛಬ್ಬಿ ಗುಂಪು ತಮ್ಮ ತಮ್ಮಲ್ಲೇ ಹೂಂಕರಿಸಿಕೊಂಡು, ಕುಕ್ಕರ್ನಿಂದ ಬಡಿದಾಡಿಕೊಂಡ ಪ್ರಕರಣ ನಡೆದಿರುವುದು ಕರ್ನಾಟಕವಾಯ್ಸ್.ಕಾಂ ಖಚಿತ ಮೂಲಗಳಿಂದ ಗೊತ್ತಾಗಿದೆ.
ನಾಗರಾಜ ಛಬ್ಬಿಯವರು ಕಲಘಟಗಿ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಕುಕ್ಕರ್ ಹಂಚುವ ಜವಾಬ್ಧಾರಿಯನ್ನ ವಹಿಸಿದ್ದು, ಹೊಸವಾಳದಲ್ಲಿ ಬೇರೊಬ್ಬರು ಬಂದು ‘ಹಿರೇತನ’ ಮಾಡಿದ್ದೆ ಗಲಾಟೆಗೆ ಕಾರಣವೆಂದು ಹೇಳಲಾಗಿದೆ.
ನಾಗರಾಜ ಛಬ್ಬಿಯವರ ಜೊತೆಗಾರ ಶಂಕರ ಮುಗಳಿ ಅವರಿಗೆ ಮುಗದ ಜಿಪಂ ಸೇರಿದಂತೆ ಹಲವು ಪ್ರದೇಶಗಳಿಗೆ ಕುಕ್ಕರ್ ಹಂಚುವ ಜವಾಬ್ದಾರಿ ನೀಡಲಾಗಿತ್ತು. ಎಲ್ಲ ಕಡೆಯೂ ಜನರನ್ನ ಸೇರಿಸಿ ಉತ್ತಮವಾಗಿ ಜನರಿಗೆ ತಲುಪಿಸುತ್ತಿದ್ದ ವೇಳೆಯಲ್ಲಿ ಗುರು ದಾನೇನವರ ಎಂಬುವವರು ಬಂದು ಗೊಂದಲ ಸೃಷ್ಠಿ ಮಾಡಿದ್ದಾರೆಂದು ಹೇಳಲಾಗಿದೆ. ಈ ಸಮಯದಲ್ಲಿ ಕುಕ್ಕರ್ ತೆಗೆದುಕೊಂಡು ಒಗೆದಾಗ, ಅದು ಓರ್ವನಿಗೆ ತಗುಲಿ ಗಾಯವಾಗಿದೆ.
ನಾಗರಾಜ ಛಬ್ಬಿಯವರ ಟೀಂನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಈ ಮೂಲಕ ಗೊತ್ತಾಗಿದೆ. ಈ ಘಟನೆಗೆ ಕಾರಣವಾದ ಅಸಲಿಯತ್ತು ಹೊರಬಿದ್ದರೇ ಇನ್ನೂ ರಗಳೆಯಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಕಿರಣ ಪಾಟೀಲ ಕುಲಕರ್ಣಿಯವರನ್ನ “ಕೆವಿ” ಕೇಳಿದಾಗ ‘ಹಂಗೇನು ನಡೆದಿಲ್ರೀ. ಎಲ್ರೂ ದೋಸ್ತ್ ಇದ್ದಂಗ್ ಅದಾರ್’ ಎಂದು ಸುಳ್ಳು ಹೇಳಿದರು.
ಸತ್ಯ ಏನು ಎಂಬುದನ್ನ ಹೊಯ್ ಕೈ ಮಾಡಿಕೊಂಡವರೇ ಕರ್ನಾಟಕವಾಯ್ಸ್.ಕಾಂಗೆ ತಿಳಿಸಿದ್ದಾರೆಂಬುದು ಇಲ್ಲಿ ವಿಶೇಷ.