ಕಲಘಟಗಿ: ಹಳ್ಳ ಹಿಡಿದ ಜೆಜೆಎಂ- ಕಾಮಗಾರಿ ಹೆಸರಲ್ಲಿ ಕೋಟ್ಯಾಂತರ ಗುಳಂ… AEE ಮಠಪತಿ ಭಾಗಿ….!?

ಕಲಘಟಗಿ: ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಜಲಜೀವನ್ ಮಷಿನ್ ಕಾರ್ಯಕ್ರಮ ತಾಲೂಕಿನಲ್ಲಿ ಹಳ್ಳ ಹಿಡಿದಿದ್ದು, ಗುತ್ತಿಗೆದಾರರಿಗೆ ಹೆಚ್ಚು ಹಣ ನೀಡಿ, ಕೆಲಸವನ್ನ ಕುಂಠಿತಗೊಳಿಸಲಾಗಿದ್ದು, ಇದಕ್ಕೆ ಇಲಾಖೆಯ ಎಇಇ ಕಾರಣವೆಂದು ಹೇಳಲಾಗುತ್ತಿದೆ.
ಪ್ರತಿ ಮನೆ ಮನೆಗೂ ನೀರು ತಲುಪಿಸಲು ಕೋಟ್ಯಾಂತರ ರೂಪಾಯಿಯನ್ನ ಸರಕಾರ ವ್ಯಯಿಸುತ್ತಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಯೋಜನೆ ಸಂಪೂರ್ಣವಾಗಿ ಹಳ್ಳ ಹಿಡಿಯುತ್ತಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ತಾಲೂಕಿನ ಬಹುತೇಕ ಗ್ರಾಮದಲ್ಲಿ ಜೆಜೆಎಂ ಗುತ್ತಿಗೆಯನ್ನ ಪ್ರಮುಖ ಗುತ್ತಿಗೆದಾರನ ಹೆಸರಿನಲ್ಲಿ ಮಾಡುತ್ತಿದ್ದು, ಅವರಿಗೆ ಎಇಇ ಶಿವಪುತ್ರ ಮಠಪತಿಯವರು ಬೇಕಾಬಿಟ್ಟಿ ಬಿಲ್ಲು ಬರೆದುಕೊಟ್ಟಿದ್ದಾರೆಂಬ ದೂರುಗಳು ಕೇಳಿ ಬಂದಿವೆ.
ಪ್ರಮುಖ ಗುತ್ತಿಗೆದಾರ ಸ್ಥಳೀಯ ಗುತ್ತಿಗೆದಾರರಿಂದ ಹೆಚ್ಚು ಹಣವನ್ನ ಬೇರೆ ಬೇರೆ ರೂಪದಲ್ಲಿ ಪಡೆಯುತ್ತಿದ್ದು, ಇದೇ ನೆಪದಿಂದ ಕಲಘಟಗಿಯಲ್ಲಿ ಜೆಜೆಎಂ ಹಳ್ಳ ಹಿಡಿಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಹಲವು ಆರೋಪ ಹೊತ್ತಿರುವ ಎಇಇ ಶಿವಪುತ್ರ ಮಠಪತಿಯವರನ್ನೇ ತಾಲೂಕು ಪಂಚಾಯತಿ ಇಓ ಹುದ್ದೆಗೆ ಇನ್ಚಾರ್ಜ್ ಹಾಕಿದ್ದು, ಇದರ ಹಿನ್ನೆಲೆ ಸ್ಥಳೀಯ ಶಾಸಕರ ಹೆಸರು ಕೇಳಿ ಬರುತ್ತಿದೆ.
ಈ ಹಿಂದೆಯಿದ್ದ ಇಓ ವರ್ಗಾವಣೆಯಾಗಿದ್ದನ್ನೇ ನೆಪ ಮಾಡಿಕೊಂಡು, ಮಠಪತಿಯವರಿಗೆ ಇನ್ಚಾರ್ಜ್ ಕೊಡಿಸುವುದರ ಹಿಂದೆ 40% ಕೈವಾಡವಿರುವ ಶಂಕೆಯನ್ನ ಸ್ಥಳೀಯ ಜ್ಞಾನವಂತರು ವ್ಯಕ್ತಪಡಿಸಿದ್ದಾರೆ.
ಮಹತ್ವಾಕಾಂಕ್ಷೆ ಯೋಜನೆಯನ್ನೇ ಸರಿಯಾಗಿ ನಿಭಾಯಿಸದ ಎಇಇ ಮಠಪತಿ, ಮತ್ತೊಂದು ಹುದ್ದೆಯನ್ನ ಹೇಗೆ ನಿಭಾಯಿಸಲು ಸಾಧ್ಯ ಎಂಬ ಜನರ ಪ್ರಶ್ನೆಗೆ ಧಾರವಾಡ ಜಿಲ್ಲಾಡಳಿತ ಉತ್ತರಿಸಬೇಕಿದೆ.