ದೂರಿನ ಮಾಹಿತಿ ನೀಡದಕ್ಕೆ “ಹವಾಲ್ದಾರ್” ಅಮಾನತ್ತು: ದೂರು ಪಡೆಯದೇ ತಿರುಗಾಡಿಸಿದ ಇನ್ಸಪೆಕ್ಟರ್ ಸೇಫ್….!!!

ಹುಬ್ಬಳ್ಳಿ: ನಗರದ ಪೊಲೀಸ್ ಇಲಾಖೆಯಲ್ಲಿ ಅಧಿಕಾರಿಗಳು ತಪ್ಪು ಮಾಡಿದರೂ ಅವರಿಗೆ ನೋಡಿಕೊಳ್ಳೋಕೆ ಹಿರಿಯ ಪೊಲೀಸ್ ಅಧಿಕಾರಿಗಳೇ ಟೊಂಕ ಕಟ್ಟಿ ನಿಂತಿದ್ದಾರೆ. ಆದರೆ, ಸಿಬ್ಬಂದಿಗಳು ತಪ್ಪು ಮಾಡಿದ್ದನ್ನೂ ನೋಡದೇ ತಕ್ಷಣವೇ ಅವರನ್ನ ಅಮಾನತ್ತು ಮಾಡಿ, ತಪ್ಪು ಮಾಡಿರುವ ಅಧಿಕಾರಿಗಳನ್ನ ಸೇಫ್ ಮಾಡುವ ತಂತ್ರ ನಗರದಲ್ಲಿ ಬೆಳಕಿಗೆ ಬಂದಿದೆ.
ಹುಬ್ಬಳ್ಳಿಯ ನವನಗರದ ಎಪಿಎಂಸಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳ ಹಿಂದೆ ಕಾಣೆಯಾಗಿದ್ದ ಮಹಿಳೆಯ ಬಗ್ಗೆ ಇನ್ಸಪೆಕ್ಟರ್ ಗೆ ಮಾಹಿತಿ ನೀಡಿಲ್ಲ. ಕರ್ತವ್ಯಲೋಪ ಎಸಗಲಾಗಿದೆ ಎಂದು ಎಪಿಎಂಸಿ ಠಾಣೆಯ ಹವಾಲ್ದಾರ್ ಗಣೇಶ ಬಡಿಗೇರ ಎಂಬುವವರನ್ನ ಅಮಾನತ್ತು ಮಾಡಲಾಗಿದೆ.

ಇದೇ ಪೊಲೀಸ್ ಠಾಣೆ ವ್ಯಾಪ್ತಿಯ ಈಶ್ವರನಗರದಲ್ಲಿ ಇಂದ್ರಾಬಾಯಿ ಪವಾರ ಎಂಬ ಮಹಿಳೆ ಕಾಣೆಯಾಗಿದ್ದಾಳೆಂದು ದೂರು ಕೊಡಲು ಬಂದಾಗ ಇನ್ಸಪೆಕ್ಟರ್ ಬಾಳಪ್ಪ ಮಂಟೂರ ಅವರು, ದೂರು ಪಡೆಯದೇ ಸಂಬಂಧಿಕರನ್ನ ಅಲೆದಾಡಿಸಿದ್ದಾರೆ. ಅವತ್ತು ಅವರು ದೂರು ಪಡೆದುಕೊಂಡಿದ್ದರೇ, ಹವಾಲ್ದಾರ್ ಗಣೇಶ ಬಡಿಗೇರ ಅಮಾನತ್ತಾಗುವ ಪ್ರಮೇಯವೇ ಬರುತ್ತಿರಲಿಲ್ಲ. ಕಾರಣವೆಂದರೇ, ಬಡಿಗೇರ ಅಮಾನತ್ತಾಗಲು ಕಾರಣವಾದ ಮಹಾದೇವಿ ನೀಲಮ್ಮನವರ ಸುಟ್ಟು ಕೊಲೆಯಾಗುವ ಮುನ್ನವೇ ಇಂದ್ರಾಬಾಯಿಯನ್ನೂ ಅದೇ ಕಲಘಟಗಿ ಪೊಲೀಸ್ ಠಾಣೆ ವ್ಯಾಪ್ತಿಯ ಕಾಡನಕೊಪ್ಪದ ಬಳಿ ಕೊಲೆ ಮಾಡಿ ಸುಡಲಾಗಿತ್ತು.

ಮೊದಲೇ ಇಂದ್ರಾಬಾಯಿಯ ಮಾಹಿತಿ ಸಿಕ್ಕಿದ್ದರೇ ಮಹಾದೇವಿಯ ಕೊಲೆ ನಡೆಯುವ ಸಾಧ್ಯತೆ ಕಡಿಮೆಯಿತ್ತು. ಆದರೆ, ಕೆಳಮಟ್ಟದ ಪೊಲೀಸರಿಗೆ ಶಿಕ್ಷೆಯನ್ನ ಸರಳವಾಗಿ ಕೊಡಲಾಗತ್ತೆ ಎಂಬುದಕ್ಕೆ ಇದೊಂದು ಸ್ಪಷ್ಟ ನಿದರ್ಶನವಾಗಿದೆ.
ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಪೊಲೀಸ್ ಕಮೀಷನರ್ ಲಾಬುರಾಮ್ ಅವರು, ನಡೆದಿರುವ ಪ್ರಮಾದ ಯಾರದ್ದು ಎಷ್ಟು ಎಂಬುದು ತಿಳಿಯದಾಯಿತಾ. ಸರಿ-ತಪ್ಪಿಗೆ ಮನಸಾಕ್ಷಿಯಾದರೂ ಉತ್ತರ ನೀಡಬೇಕಲ್ವಾ. ತಪ್ಪು ಮಾಡಿರುವ ಇನ್ಸಪೆಕ್ಟರ್ ಬಾಳಪ್ಪ ಮಂಟೂರ ಅವರಿಗೆ ಇಲಾಖೆಯಲ್ಲಿ ಯಾವುದೇ ಶಿಕ್ಷೆಯಿಲ್ಲವೇ. ಅಥವಾ ನೀವೂ ಮಾಡಿದ್ದೆ ಸರೀನಾ… ಸಂಬಂಧಿಸಿದವರು ಉತ್ತರ ನೀಡಬೇಕಿದೆ..
ಪೋನ್ ಮಾಡಂಗಿಲ್ಲಾ: ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುವ ಪ್ರತಿ ಪೊಲೀಸರಿಗೂ ಗೊತ್ತಿರುವ ಸತ್ಯವೇನೆಂದರೆ, ರಾತ್ರಿ ಒಂಬತ್ತೂವರೆ ಆದ ಮೇಲೆ ಯಾರೂ ಇನ್ಸಪೆಕ್ಟರ್ ಬಾಳಪ್ಪ ಅವರಿಗೆ ಕಾಲ್ ಮಾಡುವ ಹಾಗಿಲ್ಲ ಅಂತಿದೆ ಒಂದು ಮಾಹಿತಿ.