“ಗಾಂಜಾ ಕಳ್ಳಾಟ”- ಪಿಐ ಸೇರಿ 7 ಏಳು ಪೊಲೀಸರು ಸಸ್ಪೆಂಡ್: ಕರ್ನಾಟಕವಾಯ್ಸ್.ಕಾಂ ಬಿಗ್ ಇಂಪ್ಯಾಕ್ಟ್…!

ಹುಬ್ಬಳ್ಳಿ: ನಗರದ ಎಪಿಎಂಸಿಯಲ್ಲಿ ಗಾಂಜಾ ಮಾರಾಟ ಪ್ರಕರಣದಲ್ಲಿ ಆರೋಪಿಗಳನ್ನ ಬಿಟ್ಟು, ಗಾಂಜಾವನ್ನೇ ಮಾರಾಟ ಮಾಡಿರುವ ಬಗ್ಗೆ ಮತ್ತು ಹಣಕ್ಕಾಗಿ ಪೀಡಿಸುತ್ತಿರುವ ಕುರಿತು ಸಮಗ್ರವಾಗಿ ಪ್ರಕರಣವನ್ನ ಹೊರಹಾಕಿದ್ದ ಕರ್ನಾಟಕವಾಯ್ಸ್.ಕಾಂನ ವರದಿ ಸತ್ಯವಾಗಿದ್ದು, ಪೊಲೀಸ್ ಇನ್ಸಪೆಕ್ಟರ್, ಎಎಸ್ಐ ಸೇರಿದಂತೆ ಒಟ್ಟು ಏಳು ಜನರನ್ನ ಅಮಾನತ್ತು ಮಾಡಿ ಪೊಲೀಸ್ ಕಮೀಷನರ್ ಲಾಬುರಾಮ್ ಆದೇಶ ಹೊರಡಿಸಿದ್ದಾರೆ.
ನವನಗರದ ಎಪಿಎಂಸಿ ಠಾಣೆ ಇನ್ಸಪೆಕ್ಟರ್ ವಿಶ್ವನಾಥ ಚೌಗಲೆ, ಎಎಸ್ಐ ಕರಿಯಪ್ಪ ಗೌಡರ, ಹೆಡ್ ಕಾನ್ಸಟೇಬಲ್ ಗಳಾದ ವಿಕ್ರಮ ಪಾಟೀಲ, ನಾಗರಾಜ ಗುಡಿಮನಿ, ಶಿವಕುಮಾರ ಮೇತ್ರಿ, ಗೋಕುಲ ರಸ್ತೆಯ ದಿಲಶಾದ, ಹೊನ್ನಪ್ಪನವರ ಅಮಾನತ್ತುಗೊಂಡಿದ್ದಾರೆ.
ಎಪಿಎಂಸಿ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮಾಹಿತಿ ಆಧರಿಸಿ ಪೊಲೀಸರು ಆರೋಪಿಗಳನ್ನ ಹಿಡಿಯಲಾಗಿತ್ತು. ಆದರೆ, ಎಲ್ಲ ಆರೋಪಿಗಳನ್ನ ಬಿಟ್ಟು ಹಲವರಿಂದ ಹಣ ಪಡೆಯಲು ಮುಂದಾಗುತ್ತಿದ್ದಾರೆಂಬ ಮಾಹಿತಿಯನ್ನ ಆಧರಿಸಿ, ಕರ್ನಾಟಕವಾಯ್ಸ್.ಕಾಂ ಎಲ್ಲವನ್ನೂ ಹೊರ ಹಾಕಿತ್ತು.
ವರದಿ ಬಂದ ತಕ್ಷಣವೇ ಪೊಲೀಸ್ ಕಮೀಷನರ್ ಲಾಬುರಾಮ್ ಅವರು, ಪ್ರಕರಣವನ್ನ ತನಿಖೆ ಮಾಡುವಂತೆ ಆದೇಶಿಸಿದ್ದರು. ದಕ್ಷ ಅಧಿಕಾರಿ ಡಿಸಿಪಿ ಕೆ.ರಾಮರಾಜನ್ ಅವರು ತನಿಖಾ ವರದಿಯನ್ನ ನೀಡಿದ್ದು, ಇನ್ಸಪೆಕ್ಟರ್ ವಿಶ್ವನಾಥ ಚೌಗಲೆ ಸೇರಿ ಪ್ರಕರಣದಲ್ಲಿದ್ದ ಏಳು ಜನರನ್ನ ಅಮಾನತ್ತು ಮಾಡಿ ಕಮೀಷನರ್ ಲಾಬುರಾಮ್ ಅವರು ಆದೇಶ ಹೊರಡಿಸಿದ್ದಾರೆ.
ಕರ್ನಾಟಕವಾಯ್ಸ್.ಕಾಂ ಸಾಮಾಜಿಕ ಕಾಳಜಿಯನ್ನ ಹೊಂದಿ ಈ ವರದಿಯನ್ನ ಹೊರ ಹಾಕಿತ್ತೆ ಹೊರತಾಗಿ, ಯಾರದ್ದೋ ವ್ಯಯಕ್ತಿಕ ಕಾರಣಗಳಿಂದಲ್ಲ. ಯುವ ಸಮೂಹ ಗಾಂಜಾದ ನಸೆಯಲ್ಲಿ ಜೀವವನ್ನ ಹಾಳು ಮಾಡಿಕೊಳ್ಳುತ್ತಿವೆ. ಅಂತಹದರಲ್ಲಿ ಸಿಕ್ಕ ಗಾಂಜಾವನ್ನೇ ಮಾರಾಟ ಮಾಡುವ ಹಂತಕ್ಕೆ ಹೋಗುವ ಇಂತಹ ಆರಕ್ಷಕರು ಯಾರಿಗೆ ಬೇಕು..
ಸಾರ್ವಜನಿಕ ಹಿತಾಸಕ್ತಿ ಕಾಪಾಡಿದ ದಕ್ಷ ಅಧಿಕಾರಿಗಳಾದ ಪೊಲೀಸ್ ಕಮೀಷನರ್ ಲಾಬುರಾಮ್ ಹಾಗೂ ಡಿಸಿಪಿ ಕೆ.ರಾಮರಾಜನ್ ಅವರ ಬಗ್ಗೆ ಜನರಲ್ಲಿ ಈ ಮೂಲಕ ಮತ್ತಷ್ಟು ಗೌರವ ಹೆಚ್ಚಿದೆ.