ಚಿರತೆ ಬಂತೊಂದು ಚಿರತೆ.. ಯಾವೂರ್ ಚಿರತೆ.. ಇಲ್ಲಿಗೇಕೆ ಬಂತೋ.. ಹಾದಿ ತಪ್ಪಿ ಹೊಂಟೇತೋ…!

ಧಾರವಾಡ: ಆನೆ ಬಂತೋದಾನೆ.. ಯಾವೂರು ಆನೆ.. ಇಲ್ಲಿಗೇಕೆ ಬಂತೋ.. ಹಾದಿ ತಪ್ಪಿ ಬಂತೋ.. ಎನ್ನುವ ಮಕ್ಕಳಾಟವನ್ನ ತಾವೆಲ್ಲರೂ ನೋಡಿರಬಹುದು. ಅಂತಹದ್ದೇ ಸ್ಥಿತಿ ಧಾರವಾಡ ಜಿಲ್ಲೆಯಲ್ಲಿ ಚಿರತೆಯದ್ದಾಗಿದೆ.
ಹೌದು.. ಕಳೆದ ಒಂದು ವಾರದಿಂದ ಹುಬ್ಬಳ್ಳಿಯ ರಾಜನಗರದಿಂದ ಆರಂಭಗೊಂಡ ಚಿರತೆ ಕಣ್ಮರೆಯಾಟ, ಈಗಲೂ ಮುಂದುವರೆದಿದ್ದು, ಅರಣ್ಯಾಧಿಕಾರಿಗಳು ಸೇರಿದಂತೆ ಪೊಲೀಸರು ಹೈರಾಣಾಗಿದ್ದಾರೆ.

ದಿನಬೆಳಗಾದರೇ ಹೊಸದಾಗಿ ಊರುಗಳ ಸೇರ್ಪಡೆಯಾಗುತ್ತದೆ. ಸಂಜೆಯಾಗುತ್ತಿದ್ದ ಹಾಗೇ ಧಾರವಾಡ ತಾಲೂಕಿನ ಕವಲಗೇರಿಗೆ ಬಂದು ನಿಲ್ಲುತ್ತಿದೆ. ಆದರೆ, ನಿಖರವಾಗಿ ನೋಡಿದವರು ನೀಡಿದ ಕುರುಹುಗಳು ಯಾವುವು ಸಿಗುತ್ತಿಲ್ಲ.
ಧಾರವಾಡ ಅರಣ್ಯ ಇಲಾಖೆಯ ಬಹುತೇಕ ಅಧಿಕಾರಿಗಳು ನಿರಂತರವಾಗಿ ಅಲೆಯುತ್ತಿದ್ದಾರೆ. ಇಂದು ಕೂಡಾ ಗೋವನಕೊಪ್ಪ ಟು ಕವಲಗೇರಿ ಹೋಗಿ ಬಂದು ಹೋಗಿ ಬಂದು ಮಾಡಿದ್ದಾರೆ. ಆದರೆ, ಪತ್ತೆ ಆಗುತ್ತಿಲ್ಲ.

ಚಿರತೆಯ ಜಾಡು ವಯಸ್ಸಾದವರಿಗೆ ಮತ್ತು ಮಕ್ಕಳಿಗೆ ಮಾತ್ರ ಕಾಣುತ್ತಿರುವುದು ಕೂಡಾ ಹಲವು ರೀತಿಯಲ್ಲಿ ಸಂಶಯ ಮೂಡಿಸುತ್ತಿದೆ. ಏನನ್ನೋ ನೋಡಿ, ಇನ್ನೇನ್ನೋ ಅಂದುಕೊಳ್ಳುತ್ತಿದ್ದಾರೆಯೇ ಎಂಬ ಪ್ರಶ್ನೆ ಕೂಡಾ ಮೂಡುತ್ತಿದೆ. ಇಷ್ಟೇಲ್ಲದರ ನಡುವೆಯೂ ಚಿರತೆ ಮಾತ್ರ ಕಣ್ಣಾ ಮುಚ್ಚಾಲೆ ಆಡುತ್ತಿದೆ.
ಅರಣ್ಯ ಇಲಾಖೆಯ ಸಿಬ್ಬಂದಿಗಳು ಮಾತ್ರ.. ಚಿರತೆ ಬಂತೊಂದು ಚಿರತೆ.. ಯಾವೂರು ಚಿರತೆ.. ಎಲ್ಲಿಂದ ಬಂತು.. ಎಲ್ಲೀ ಐತೋ… ಎನ್ನುವಂತಾಗಿದೆ.