ಹೆಂಡತಿ ತಂಗಿಯನ್ನೇ ಅಪಹರಣ ಮಾಡಲು 10ಲಕ್ಷಕ್ಕೆ ಸುಫಾರಿ…!

ಧಾರವಾಡ: ತನ್ನ ಮಡದಿಯ ಸ್ವಂತ ತಂಗಿಯನ್ನೇ ಅಪಹರಣ ಮಾಡಲು ಹತ್ತು ಲಕ್ಷ ರೂಪಾಯಿಗೆ ಸುಫಾರಿ ಕೊಟ್ಟ ಪ್ರಕರಣವನ್ನ ಪತ್ತೆ ಮಾಡಿ, ಆರೋಪಿಗಳನ್ನ ಹೆಡಮುರಿಗೆ ಕಟ್ಟುವಲ್ಲಿ ಧಾರವಾಡದ ಶಹರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಕುಂದಗೋಳ ಪಟ್ಟಣದಲ್ಲಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಎಫ್ ಡಿಎ ಆಗಿರುವ ಹುಬ್ಬಳ್ಳಿ ಮಂಟೂರ ರಸ್ತೆಯ ಸ್ವರಾಜನಗರದ ನಿವಾಸಿಯಾಗಿರುವ ಮಕ್ತುಂಅಲಿ ಮೈಬೂಬ ಟೋಪದಾರ ಎಂಬ ಬಹುದ್ದೂರ ಗಂಡು ತನ್ನ ಹೆಂಡತಿಯ ತಂಗಿಯನ್ನೇ ಮದುವೆಯಾಗುವ ಉದ್ದೇಶದಿಂದ 10 ಲಕ್ಷಕ್ಕೆ ಸುಫಾರಿ ಕೊಟ್ಟು ಸಿಕ್ಕು ಬಿದ್ದಿದ್ದಾನೆ.

ಮಕ್ತುಂಅಲಿಯ ಹೆಂಡತಿಯ ತಂಗಿಯನ್ನ ಅಪಹರಣ ಮಾಡಲು 10ಲಕ್ಷ ರೂಪಾಯಿ ಸುಫಾರಿ ಪಡೆದು, ಐದು ಲಕ್ಷ ರೂಪಾಯಿ ಅಡ್ವಾನ್ಸ್ ಪಡೆದಿದ್ದ ಉತ್ತರಕನ್ನಡ ಜಿಲ್ಲೆ ಸಿದ್ಧಾಪುರ ತಾಲೂಕಿನ ಪ್ರವೀಣ ಕೃಷ್ಣಾ ನಾಯ್ಕ ಹಾಗೂ ಬಾಗಲಕೋಟೆ ಜಿಲ್ಲೆ ಬದಾಮಿ ತಾಲೂಕಿನ ಕೆರೂರಿನ ಚೇತನ ಬಸಪ್ಪ ಹಡಪದ ಎಂಬುವವರನ್ನೂ ಪೊಲೀಸರು ಬಂಧಿಸಿದ್ದಾರೆ.

ಸರಕಾರಿ ನೌಕರನ ಪತ್ನಿ ನೀಡಿದ ದೂರಿನ ಮೇಲೆ ತನಿಖೆ ಆರಂಭಿಸಿದ್ದ ಧಾರವಾಡ ಶಹರ ಠಾಣೆ ಇನ್ಸಪೆಕ್ಟರ್ ಸಂಗಮೇಶ ದಿಡಿಗಿನಾಳ, ಎಎಸ್ಐ ಮಹೇಶ ಕುರ್ತಕೋಟಿ, ಹವಾಲ್ದಾರ ಎಚ್.ಎಚ್.ಚಿಕ್ಕಮಠ, ಪ್ರವೀಣ ದಡೇದ ಸಿಬ್ಬಂದಿಗಳಾದ ಚೆನ್ನಬಸಪ್ಪ ಎನ್, ಲಕ್ಷ್ಮಣ ಲಮಾಣಿ, ಮೌನೇಶ ಚವ್ಹಾಣ ಆರೋಪಿಗಳನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.