ಒಂದು ಕಾಲಿಗಾಗಿ ಹುಡುಕಾಟ ನಡೆಸಿರುವ ಕಮೀಷನರೇಟ್-ಜಿಲ್ಲಾ ಪೊಲೀಸ್..!

ಹುಬ್ಬಳ್ಳಿ: ಕಳೆದ ಮೂರು ದಿನಗಳ ಹಿಂದೆ ಸಿಕ್ಕಿರುವ ರುಂಡ ಹಾಗೂ ಮುಂಡದ ಪ್ರಕರಣದಲ್ಲಿ ನಾಪತ್ತೆಯಾಗಿರುವ ಕಾಲೊಂದರ ಪತ್ತೆಗಾಗಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ಹಾಗೂ ಧಾರವಾಡ ಜಿಲ್ಲಾ ಪೊಲೀಸ್ ಅಧಿಕಾರಿಗಳು ತೀವ್ರ ಥರದ ಹುಡುಕಾಟ ಆರಂಭಿಸಿದ್ದಾರೆ.

ಹುಬ್ಬಳ್ಳಿ ತಾಲೂಕಿನ ದೇವರಗುಡಿಹಾಳ ಗ್ರಾಮದ ಹೊರವಲಯದಲ್ಲಿ ಯುವಕನೋರ್ವನ ರುಂಡ ಸಿಕ್ಕ ನಂತರ ಪೊಲೀಸ್ ಕಮೀಷನರೇಟಿನ ಕೇಶ್ವಾಪುರ ಠಾಣೆಯ ವ್ಯಾಪ್ತಿಯಲ್ಲಿ ದೇಹ ಹಾಗೂ ಎರಡು ಕೈ, ಒಂದು ಕಾಲು ಸಿಕ್ಕಿದೆ. ಆದರೆ, ಇಲ್ಲಿಯವರೆಗೆ ಇನ್ನೊಂದು ಕಾಲು ಸಿಗದೇ ಇರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

ಕ್ರೂರವಾಗಿ ಕೊಲೆ ಮಾಡಿರುವ ಪ್ರಕರಣದಲ್ಲಿ ಸತ್ತಿರುವ ವ್ಯಕ್ತಿ ಯಾರೆಂಬುದು ತಿಳಿಯಲು ಯಾವುದೇ ಸಾಕ್ಷ್ಯಗಳು ದೊರಕಿಲ್ಲ. ಅಷ್ಟೇ ಅಲ್ಲ, ಸಿಕ್ಕಿರುವ ಸುಳಿವುಗಳು, ಯಾವುದೇ ನಿಖರತೆಯನ್ನ ನೀಡದೇ ಇರುವುದು ಮತ್ತಷ್ಟು ಗೊಂದಲ ಸೃಷ್ಟಿ ಮಾಡುತ್ತಿದೆ.
ಧಾರವಾಡ ಜಿಲ್ಲೆಯ ಪೊಲೀಸರಿಗೆ ಹೊಸದೊಂದು ಸವಾಲನ್ನ ಸೃಷ್ಟಿ ಮಾಡಿರುವ ಪ್ರಕರಣಕ್ಕಾಗಿ ಐವತ್ತಕ್ಕೂ ಹೆಚ್ಚು ಪೊಲೀಸರು ಹುಡುಕಾಟ ನಡೆಸಿದ್ದಾರೆ. ಆದರೆ, ಯಾವುದೇ ಸುಳಿವು ದೊರಕುತ್ತಿಲ್ಲವೆಂಬುದೇ ಬೇಸರದ ಸಂಗತಿಯಾಗಿದೆ.