ಹುಬ್ಬಳ್ಳಿ ಠಾಣೆಯಲ್ಲೇ ಎಎಸ್ಐ ಮೇಲೆ ಪೊಲೀಸ್ ಹಲ್ಲೆ…!?

ಹುಬ್ಬಳ್ಳಿ: ಡ್ಯೂಟಿ ನೇಮಕದ ಸಂಬಂಧವಾಗಿ ಎಎಸ್ಐವೊಬ್ಬರನ್ನ ಪೊಲೀಸ್ ಕಾನ್ ಸ್ಟೇಬಲ್ ನೋರ್ವ ತಳ್ಳಿದ ಘಟನೆ ನಡೆದಿದ್ದು, ಎಎಸ್ಐ ಮಾನಸಿಕವಾಗಿ ನೊಂದು ಆಸ್ಪತ್ರೆಗೆ ಸೇರುವ ಸ್ಥಿತಿ ಬಂದೊದಗಿದೆ.

ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದ್ದು, ಬೆಳಿಗ್ಗೆ ಕರ್ತವ್ಯ ನಿರ್ವಹಿಸಿ ಮತ್ತೆ ಡ್ಯೂಟಿಗೆ ನೇಮಕ ಮಾಡಿದ್ದರಿಂದ ಠಾಣೆಗೆ ಬಂದ ಎಎಸ್ಐಯೊಬ್ಬರು, ಡ್ಯೂಟಿ ನೇಮಕ ಮಾಡುವ ಪೇದೆಯನ್ನ ಕೇಳಿದ್ದಾರೆ. ತಮಗಿಂತ ಹಿರಿಯರು ಎನ್ನುವುದನ್ನ ಮರೆತು, ಏರು ಧ್ವನಿಯಲ್ಲಿ ಮಾತನಾಡಿ, ಎಎಸ್ಐ ಅವರನ್ನ ದೂಡಿದ್ದಾರೆ. ಅಷ್ಟೇ ಅಲ್ಲ, ಕಾಲರ್ ಹಿಡಿದು ಅಸಹ್ಯವಾಗುವಂತೆ ಮಾತನಾಡಿದ್ದಾರೆಂದು ಗೊತ್ತಾಗಿದೆ.
ಇದರಿಂದ ಠಾಣೆಯಲ್ಲಿ ಗೊಂದಲ ಸೃಷ್ಠಿಯಾಗಿದ್ದು, ಎಎಸ್ಐ ಕುಟುಂಬಸ್ಥರು ಬಂದು, ಮೊದಲೇ ಅನಾರೋಗ್ಯದಿಂದ ಬಳಲುತ್ತಿರುವ ಎಎಸ್ಐಗೆ ಹಲ್ಲೆ ಮಾಡಿರುವ ಬಗ್ಗೆ ದೂರು ದಾಖಲು ಮಾಡಿಕೊಳ್ಳುವಂತೆ ಪಟ್ಟು ಹಿಡಿದಿದ್ದರು. ಪರಿಸ್ಥಿತಿ ಹತೋಟಿ ಮೀರುತ್ತಿದೆ ಎಂದು ಗೊತ್ತಾದ ತಕ್ಷಣವೇ, ಹಿರಿಯ ಪೊಲೀಸ್ ಅಧಿಕಾರಿಗಳು ಠಾಣೆಗೆ ಬಂದು ಹೋಗಿದ್ದಾರೆ.
ಇತ್ತೀಚೆಗೆ ಇಲಾಖೆಗೆ ಸೇರಿರುವ ಪೊಲೀಸ್ ಕಾನ್ಸಟೇಬಲ್ ನಡೆದುಕೊಂಡು ರೀತಿ ಎಲ್ಲರಲ್ಲೂ ಅಸಹ್ಯ ಮೂಡಿಸಿದ್ದು, ಠಾಣೆಯಲ್ಲಿ ಯಾವುದೂ ಸರಿಯಿಲ್ಲವೆನ್ನುವಂತಾಗಿದೆ ಎಂದು ಹೇಳಲಾಗಿದೆ.
ಘಟನೆಯಿಂದ ಮಾನಸಿಕವಾಗಿ ನೊಂದಿರುವ ಎಎಸ್ಐ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆಯಿದ್ದು, ಮುಂದೆ ಠಾಣೆಯಲ್ಲಿ ಮತ್ತೇನಾಗುತ್ತೋ ಎಂಬುದನ್ನ ಕಾದು ನೋಡಬೇಕಿದೆ.