ಬಾರದ ಲೋಕಕ್ಕೆ ಹೊರಟ ನಿಂತ “ಜಿಗ್ರಿ ದೋಸ್ತ್”ಗಳು…!

ಧಾರವಾಡ: ಅವರಿಬ್ಬರ ದೇಹಗಳು ಬೇರೆಯಿದ್ದವು ಹೊರತು ಮನಸ್ಸುಗಳಲ್ಲ. ಆತ ಕೆಮ್ಮಿದರೇ, ಈತ ನೀರು ಕುಡಿಯುತ್ತಿದ್ದ. ಈತನಿಗೆ ನೆಗಡಿ ಬಂದ್ರೇ, ಆತ ಮೌನವಾಗುತ್ತಿದ್ದ. ಎಲ್ಲಿಗೆ ಹೋದರೂ ಕೂಡಿಯೇ ಹೋಗುತ್ತಿದ್ದ ಗೆಳೆಯರಿಬ್ಬರು ಬಾರದ ಲೋಕಕ್ಕೂ ಕೂಡಿಯೇ ಹೊರಟು ಹೋಗಿರುವ ಮನಕರಗುವ ಘಟನೆಗೆ ಕುಂದಗೋಳ ಪಟ್ಟಣ ಸಾಕ್ಷಿಯಾಗಿದೆ.

ಕುಂದಗೋಳ-ಶೆರೇವಾಡ ಟೋಲಗೇಟ್ ಬಳಿ ಭೀಕರ ರಸ್ತೆ ಅಪಘಾತದಲ್ಲಿ ತೀರಿಕೊಂಡಿದ್ದು, ಕುಂದಗೋಳ ಪಟ್ಟಣದ ಇಬ್ಬರು ಆಪ್ತಮಿತ್ರರು. ಇಮ್ರಾನ ಹುಬ್ಬಳ್ಳಿ ಹಾಗೂ ಮೈನು ಮಿಶ್ರಿಕೋಟಿ. ಆತನನ್ನ ಬಿಟ್ಟು ಈತ, ಈತನನ್ನ ಬಿಟ್ಟು ಆತ ಯಾವತ್ತೂ ಕಾಣಿಸಿಕೊಳ್ಳುತ್ತಿರಲೇ ಇಲ್ಲ.

ಕೆಲವು ತಿಂಗಳಗಳ ಹಿಂದಷ್ಟೇ ಇಮ್ರಾನ ಹುಬ್ಬಳ್ಳಿಯ ತಂದೆ ಕೂಡಾ ಸಾವಿಗೀಡಾಗಿದ್ದಾರೆ. ನಿನ್ನೆ ಹುಬ್ಬಳ್ಳಿಗೆ ಹೋಗಿ ಮರಳಿ ಬರುವಾಗ, ಬೈಕುಗಳ ಮುಖಾಮುಖಿ ಡಿಕ್ಕಿಯಲ್ಲಿ ಸಣ್ಣ ವಯಸ್ಸಿನ ಇಬ್ಬರು ಇಲ್ಲವಾಗಿದ್ದು, ಇಡೀ ಕುಂದಗೋಳ ಪಟ್ಟಣವೇ ಮರುಗುವಂತಾಗಿದೆ.
ಜಿಗರಿ ದೋಸ್ತಗಳ ಅಂತ್ಯ ಸಂಸ್ಕಾರವೂ ಜೊತೆ ಜೊತೆಯಾಗಿಯೇ ನಡೆಯಿತು. ಇಬ್ಬರ “ಜನಾಜಾ”ವನ್ನ ಒಂದೇ ಬಾರಿಗೆ ಪಟ್ಟಣದಲ್ಲಿ ತೆಗೆದುಕೊಂಡು ಹೋದಾಗ, ಸಾವಿರಾರೂ ಸಂಖ್ಯೆಯಲ್ಲಿ ಜನರು ಸೇರಿದ್ದರು. ಗೆಳೆಯರಿಬ್ಬರ ಸಾವಿಗೆ ಮರುಗದವರೇ ಇರಲಿಲ್ಲ.