ಅವಸರವೇ ಅಪಘಾತಕ್ಕೆ ಕಾರಣವೆಂದು ಗೊತ್ತಿದ್ದರೂ ಬಸ್ಸಿಂದ ಜಿಗಿದವರ ಪ್ರಾಣ ಕಾಪಾಡಿದ “ಶಿವಳ್ಳಿ”ಗರು….!

ಧಾರವಾಡ: ತಾಲೂಕಿನ ಶಿವಳ್ಳಿ ಗ್ರಾಮದಲ್ಲಿ ಬಸ್ಸಿನಿಂದ ಕೆಳಗೆ ಬಿದ್ದು ಇಬ್ಬರು ಮಹಿಳೆಯರು ಗಾಯಗೊಂಡ ಘಟನೆ ನಡೆದಿದ್ದು, ಬಿದ್ದ ತಕ್ಷಣವೇ ಗ್ರಾಮದ ಹಲವರು ಅವರನ್ನ ಉಪಚರಿಸಿ, ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.

ನವಲಗುಂದದಿಂದ ಶಿವಳ್ಳಿಗೆ ಟಿಕೆಟ್ ಪಡೆದಿದ್ದ ಇಬ್ಬರು ಮಹಿಳೆಯರು, ಗ್ರಾಮ ಬರುವ ಮುನ್ನವೇ ಶಿವಳ್ಳಿಗೆ ಇಳಿಯಬೇಕೆಂದು ಗಡಿಬಿಡಿ ಮಾಡಿ ಹೊರಗೆ ಜಿಗಿದಿದ್ದಾರೆ. ಇದರಿಂದ ಇಬ್ಬರು ಮಹಿಳೆಯರಿಗೂ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವವಾಗುತ್ತಿತ್ತು. ತಕ್ಷಣವೇ, ಘಟನಾ ಸ್ಥಳದ ಪಕ್ಕದಲ್ಲಿದ್ದ ಮನೆಯೊಂದರಲ್ಲಿ ಚಾಪೆ ಹಾಕಿ, ಅವರಿಬ್ಬರನ್ನೂ ಉಪಚರಿಸಲಾಗಿದೆ.

ಗ್ರಾಮದ ಸುರೇಶ ಬಡಪ್ಪನವರ, ನಾಗರಾಜ ಹೈಬತ್ತಿ, ಮಂಜುನಾಥ ಕದಂ ಸೇರಿದಂತೆ ಹಲವರು, ಮಹಿಳೆರಿಬ್ಬರಿಗೆ ನೀರು, ಕುಡಿಸಿ ಆಯಾಸವನ್ನ ಕಡಿಮೆಗೊಳಿಸಿ, ನಂತರ ಕಾರಿನಲ್ಲಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಘಟನಾ ಸ್ಥಳಕ್ಕೆ ಧಾರವಾಡ ಗ್ರಾಮೀಣ ಠಾಣೆಯ ಎಎಸ್ಐ ಪಾಟೀಲ ಬಂದು ಪರಿಶೀಲನೆ ಮಾಡಿದ್ದು, ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕ, ನಿರ್ವಾಹಕ ವಿಚಾರಣೆಯನ್ನ ನಡೆಸಿದ್ದು, ಮಾಹಿತಿಯನ್ನೂ ಸಂಗ್ರಹಿಸಿ ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.