ಜೈಲಿನಲ್ಲಿದ್ದವನನ್ನ ಕಸ್ಟಡಿಗೆ ಪಡೆದು ವಿಚಾರಣೆ: ಹೊರಬಿತ್ತು ಮನೆಗಳ್ಳತನ ಪ್ರಕರಣ..!
ಧಾರವಾಡ: ಕಾರಾಗೃಹದಲ್ಲಿದ್ದ ಆರೋಪಿಯನ್ನ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ಮಾಡಿದಾಗ ಮನೆಗಳ್ಳತನ ಮಾಡಿದ ಪ್ರಕರಣವೊಂದು ಬಯಲಿಗೆ ಬಂದ ಘಟನೆ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಮೂಲತಃ ಗದಗ ಜಿಲ್ಲೆಯ ನರಗುಂದ ಪಟ್ಟಣದ ಕಿರಣ ಸುರೇಶ ಬೇವಿನಗಿಡದ ಅಲಿಯಾಸ್ ಬೇವಿನಮರದ ಎಂಬಾತನನ್ನೇ ವಿದ್ಯಾಗಿರಿ ಠಾಣೆಯ ಇನ್ಸಪೆಕ್ಟರ್ ಎಂ.ಕೆ.ಬಸಾಪೂರ ನ್ಯಾಯಾಲಯದ ಅನುಮತಿ ಪಡೆದು, ಕಸ್ಟಡಿಯಲ್ಲಿ ವಿಚಾರಣೆ ನಡೆಸಿದ್ದರು.
ಆರೋಪಿಯಿಂದ 15 ಗ್ರಾಂ ಚಿನ್ನ ಹಾಗೂ 44 ಗ್ರಾಂ ತೂಕದ ಬೆಳ್ಳಿಯ ಒಡವೆಗಳನ್ನ ವಶಕ್ಕೆ ಪಡೆಯಲಾಗಿದ್ದು, ಇವುಗಳ ಮೌಲ್ಯ 78 ಸಾವಿರ ರೂಪಾಯಿ ಎಂದು ಹೇಳಲಾಗಿದೆ.
2019ರಲ್ಲಿ ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆಯ ಕೀಲಿ ಮುರಿದು ಕಳ್ಳತನ ಮಾಡಿರುವ ಪ್ರಕರಣ ಈ ಮೂಲಕ ಬಯಲಿಗೆ ಬಂದಿದೆ.