ಹುಬ್ಬಳ್ಳಿ ಔಟರ್ ರಿಂಗ್ ರೋಡ್: ಆಗಲಿದೇಯಾ ಮತ್ತೊಂದು “ಸಾವಿನ ರಸ್ತೆ”..?
ಹುಬ್ಬಳ್ಳಿ: ನೂರಾರು ಜನರ ಸಾವಿಗೆ ಕಾರಣವಾಗಿದ್ದ ‘ಸಾವಿನ ರಸ್ತೆ’ ಹುಬ್ಬಳ್ಳಿ-ಧಾರವಾಡದ ಬೈಪಾಸ್ ರಸ್ತೆಯಲ್ಲಿ ಅಪಘಾತ ಸಂಭವಿಸದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅಧಿಕಾರಿಗಳ ತಂಡ ವಿಶೇಷ ವರದಿಯನ್ನು ಸಿದ್ದಗೊಳಿಸುವ ಕಾರ್ಯ ಮಾಡುತ್ತಿರುವ ಸಂಧರ್ಭದಲ್ಲೇ, ಇನ್ನೊಂದು ‘ಸಾವಿನ ರಸ್ತೆ’ ತಲೆ ಎತ್ತುತ್ತಿದೆ. ಅದುವೇ.. ಹುಬ್ಬಳ್ಳಿಯ ಔಟರ್ ರಿಂಗ್ ರೋಡ.
ಸೊಲ್ಲಾಪುರ ರಸ್ತೆಯ ಕುಸುಗಲ್ಲದಿಂದ-ಗದಗ ರಸ್ತೆ-ಗಬ್ಬೂರಕ್ರಾಸ್ ಮೂಲಕ ಪಿಬಿ ರಸ್ತೆ ಕೂಡಿಸುವ ಹಾಗೂ ಹುಬ್ಬಳ್ಳಿ ನಗರದ ವಾಹನದಟ್ಟಣೆಯನ್ನು ಗಣನೀಯವಾಗಿ ಕಡಿಮೆ ಮಾಡುವ ಈ ರಸ್ತೆ ‘ಸಾವಿನ ರಸ್ತೆಯಾಗಿ ಮಾರ್ಪಾಟುಗೊಳ್ಳುವುದರಲ್ಲಿ ಎರಡನೆ ಮಾತೇಯಿಲ್ಲ. ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಈಗಲೇ ಎಚ್ಚೆತ್ತುಗೊಳ್ಳದಿದ್ದರೆ ಹುಬ್ಬಳ್ಳಿ-ಧಾರವಾಡ ಬೈಪಾಸ್ ಯೋಜನೆಗೆ ಶಪಿಸದ ಹಾಗೆ ಔಟರ್ ರಿಂಗ್ ರೋಡ್ ಯೋಜನೆಗೆ ಜನ ಹಿಡಿಶಾಪ ಹಾಕೊ ಹಾಗಾಗುವುದರಲ್ಲಿ ಸಂಶಯವೇ ಇಲ್ಲ.
ಕೇಂದ್ರ ಮಂತ್ರಿ ಹಾಗೂ ಈ ಭಾಗದ ಜನಪ್ರಿಯ ಸಂಸದ ಪ್ರಲ್ಹಾದ ಜೋಶಿ ಹಾಗೂ ಈ ಭಾಗದ ಮಾಜಿ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ಅವರ ಕನಸಿನ ಕೂಸಾಗಿರುವ ನೂರಾರು ಕೋಟಿ ರೂಪಾಯಿ ವೆಚ್ಚದ ಯೋಜನೆ ಮಹಾನಗರಕ್ಕೆ ಕಪ್ಪು ಚುಕ್ಕೆಯಾಗುವ ಮುನ್ನ ಎಲ್ಲ ನಾಯಕರುಗಳು ಎಚ್ಚೆತ್ತು ಒಮ್ಮೆ ಗದಗ ರಸ್ತೆಯಿಂದ ಬಿಡನಾಳ- ಪಿ ಬಿ ರಸ್ತೆ ಗೆ ಸಂಪರ್ಕ ಕಲ್ಪಿಸುವ ಔಟರ್ ರಿಂಗ್ ರಸ್ತೆಗೆ ಭೇಟಿ ನೀಡಿ ರೈತರು ತಮ್ಮ ಹೊಲಗದ್ದೆಗಳಿಗೆ ಹೋಗಲು ಪಡುತ್ತಿರುವ ತೊಂದರೆ ಹಾಗೂ ಮುಂದಿನ ದಿನಗಳಲ್ಲಿ ಪಡಬೇಕಾದ ಕಷ್ಟಗಳನ್ನು ನೋಡಿ ಶಾಶ್ವತ ಪರಿಹಾರವೊಂದನ್ನು ರೂಪಿಸಬೇಕಾಗಿದೆ.
ಇತ್ತೀಚೆಗೆ ಯುವ ರೈತ ಮುಖಂಡ ಮೋಹನ ಅಸುಂಡಿ ಹುಬ್ಬಳ್ಳಿ ರೈತ ಸಂಘದ ಮುಖಂಡರೆಲ್ಲರನ್ನು ಕರೆದುಕೊಂಡು ರಾಜ್ಯ ಹಾಗೂ ಕೇಂದ್ರ ಸರಕಾರದ ಗಮನ ಸೆಳೆಯಲು ಅಂಡರ್ ಪಾಸ್ ನಿರ್ಮಾಣದ ಬೇಡಿಕೆಗೆ ಹೋರಾಟ ನಡೆಸಿದಾಗಲೇ ಈ ರಸ್ತೆಯೂ ಕೆಲವೇ ದಿನಗಳಲ್ಲಿ ಸಾವಿನ ರಸ್ತೆಯಾಗುವುದರಲ್ಲಿ ಸಂಶಯವೇ ಇಲ್ಲ ಎಂಬ ವಾಸ್ತವ ಮನವರಿಕೆ ಆಗಿದ್ದು.
ಔಟರ್ ರಿಂಗ್ ರಸ್ತೆಗಾಗಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಹಲವಾರು ದಶಕಗಳಿಂದ ಇದ್ದ ರಸ್ತೆಗಳನ್ನೇ ಬಂದ್ ಮಾಡಿಬಿಟ್ಟಿದ್ದಾರೆ. ಬಿಡನಾಳ-ಕುಂದಗೋಳ ರಸ್ತೆ ನೇರ ಸಂಪರ್ಕ ಕಡಿದು ಹಾಕಿರುವ ಅಧಿಕಾರಿಗಳು ಈಗ ರೈತರ ಹೋರಾಟದ ನಂತರ ಎಚ್ಚೆತ್ತುಕೊಂಡು, ಸಮಸ್ಯೆಗೆ ಹೇಗೆ ಪರಿಹಾರ ಕಂಡುಕೊಳ್ಳಬೇಕು ಎಂಬ ಗೊಂದಲದಲ್ಲಿದ್ದಾರೆ.
ಅತ್ಯಂತ ಜಾಣ ಚಾಣಾಕ್ಷರೆಂದೇ ರಾಜ್ಯ ರಾಜಕೀಯದಲ್ಲಿ ಗುರುತಿಸಿಕೊಂಡಿರುವ ಕೇಂದ್ರ ಮಂತ್ರಿ ಪ್ರಲ್ಹಾದ ಜೋಶಿ ಅವರ ಕ್ಷೇತ್ರದಲ್ಲಿಯೇ ಇಂತಹದೊಂದು ಭಾರೀ ಪ್ರಮಾದ ನಡೆದಿರುವುದನ್ನು ಕಂಡು ಎಲ್ಲರೂ ಹುಬ್ಬೇರಿಸುವಂತಾಗಿದೆ.
ದೆಹಲಿ ರೈತರ ಹೋರಾಟಕ್ಕೆ ಬೆಂಬಲವಾಗಿ ನಿಂತಿರುವ ರಾಜ್ಯದಲ್ಲಿಯ ಪ್ರತಿಪಕ್ಷ ಕಣ್ಣಿದ್ದರೂ ಕುರುಡರಂತೆ ಹಾಗೂ ಕಿವಿಯಿದ್ದರೂ ಕಿವುಡರಂತೆ ವರ್ತಿಸುತ್ತಿರುವುದನ್ನು ಕಂಡರೆ ಈ ರಾಜಕೀಯ ಪಕ್ಷಗಳಿಗೆ ಯಾರಾದರೂ ಸತ್ತ ಮೇಲೆಯೇ ಎಚ್ಚೆತ್ತುಕೊಳ್ಳುವ ರೂಢಿಯೇ ಅಥವಾ ಇವರ ದೃಷ್ಟಿಯಲ್ಲಿ ಮನುಷ್ಯನ ಜೀವದ ಬೆಲೆಯೇ ಇಲ್ಲವೇ..? ಎಂಬ ಪ್ರಶ್ನೆ ಕಾಡುತ್ತಿದೆ.