ಬುಡಕಟ್ಟು ಜನಾಂಗಕ್ಕೆ ನೆರವು ನೀಡಲು ಕೇಂದ್ರಕ್ಕೆ ಮನವಿ ಮಾಡಿಕೊಂಡ ಡಿಸಿಎಂ ಗೋವಿಂದ ಕಾರಜೋಳ ಮನವಿ
1 min readಬೆಂಗಳೂರು: ಕೊರೋನಾದಿಂದ ಪರಿಶಿಷ್ಟ ಪಂಗಡ ಹಾಗೂ ಬುಡಕಟ್ಟು ಸಮುದಾಯ ಸಂಕಷ್ಟದಲ್ಲಿದ್ದು, ಅವರಿಗೆ ಜೀವನೋಪಾಯ ಹಾಗೂ ಆರ್ಥಿಕ ಸ್ವಾವಲಂಬನೆಗಾಗಿ 155ಕೋಟಿ ರೂ. ವೆಚ್ಚದ ವಿವಿಧ ಯೋಜನೆಗಳ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಈ ಪ್ರಸ್ತಾವನೆಯನ್ನು ಶೀಘ್ರವಾಗಿ ಮಂಜೂರು ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮನವಿ ಮಾಡಿದ್ದಾರೆ.
ಕೇಂದ್ರ ಬುಡಕಟ್ಟು ಕಲ್ಯಾಣ ಸಚಿವ ಜುವಲ್ ಓರಾಂ ಅವರೊಂದಿಗೆ ವೀಡಿಯೋ ಸಂವಾದದಲ್ಲಿ ಮಾತನಾಡಿದ ಕಾರಜೋಳ, ಕಿರು ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸುವ ಬುಡಕಟ್ಟು ಜನರನ್ನು ಸಂಘಟಿಸಿ ತರಬೇತಿ ನೀಡಿ, ಸಾಮರ್ಥ್ಯ ವೃದ್ದಿಸುವ ಮೂಲಕ ಸ್ವಾವಲಂಭಿಗಳನ್ನಾಗಿಸುವುದು. ಇವರಿಂದ ಕಿರು ಅರಣ್ಯ ಉತ್ಪನ್ನಗಳನ್ನು ಹೆಚ್ಚಿನ ಬೆಂಬಲ ಬೆಲೆಯೊಂದಿಗೆ ಖರೀದಿಸಬೇಕು. ಬೆಂಬಲ ಬೆಲೆ ಹೆಚ್ಚಳಕ್ಕೆ 7 ಕೋಟಿ, ತಲಾ 2 ಕೋಟಿ ರೂ. ವೆಚ್ಚದ 7 ಕಿರು ಅರಣ್ಯ ಉತ್ಪನ್ನ ಸಂಸ್ಕರಣಾ ಘಟಕಗಳನ್ನು ಸಿಆರ್ಟಿಆರ್ಐ ಮೂಲಕ ಸ್ಥಾಪಿಸಿ ತಾಂತ್ರಿಕ ಸಹಕಾರದೊಂದಿಗೆ ಅನುಷ್ಟಾನಗೊಳಿಸಬೇಕು. 355 ಇ ಕಾರ್ಟ್ ಗಳ ಒದಗಿಸಬೇಕು. 41 ಕೋಟಿ ರೂ. ವೆಚ್ಚದ ಕುರಿ ಮತ್ತು ಮೇಕೆ ಘಟಕಗಳ ಸ್ಥಾಪನೆ, ನೀರಾವರಿ ಸೌಲಭ್ಯ, ಶಿಥಿಲಗೊಂಡ ಆಶ್ರಮ ಶಾಲೆಗಳ ದುರಸ್ಥಿಗೊಳಿಸುವ ಪ್ರಸ್ತಾವನೆ ಸೇರಿದಂತೆ ಒಟ್ಟು 155 ಕೋಟಿ ರೂ. ವೆಚ್ಚದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಕಿರು ಅರಣ್ಯ ಉತ್ಪನ್ನಗಳ ಸಂಗ್ರಹಣೆ, ಅಗತ್ಯ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ, ಮೌಲ್ಯ ವರ್ಧನೆ, ಮಾರುಕಟ್ಟೆ ಸೃಜಿಸುವುದು, ಅಭಿವೃದ್ಧಿ ಪಡಿಸುವ ಹಿನ್ನೆಲೆಯಲ್ಲಿ ವನ-ಧನ ವಿಕಾಸ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಕಿರು ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸುವ ಬುಡಕಟ್ಟು ಜನರನ್ನು ಸಂಘಟಿಸಿ ತರಬೇತಿಗೊಳಿಸಿ ಸಾಮಥ್ರ್ಯ ವೃದ್ದಿಸಿ ಆರ್ಥಿಕವಾಗಿ ಸ್ವಾವಲಂಭಿಗಳನ್ನಾಗಿಸಬೇಕು. 23 ಕಿರು ಅರಣ್ಯ ಉತ್ಪನ್ನಗಳು ರಾಜ್ಯದಲ್ಲಿ ದೊರಕುತ್ತಿವೆ. 23 ಲ್ಯಾಂಪ್ಸ್ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, 74,500 ಸದಸ್ಯರಿದ್ದಾರೆ. ಬುಡಕಟ್ಟು ಜನಾಂಗದವರಿಗೆ ಕೊರೊನಾ ವೈರಾಣು ಬಗ್ಗೆ ಜಾಗೃತಿ ಮೂಡಿಸಿ, ಮಾಸ್ಕ್ಗಳನ್ನು ವಿತರಿಸಲಾಗಿದೆ ಎಂದು ಹೇಳಿದರು.
ಈ ಸಮಯದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕುಮಾರ ನಾಯಕ್, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ನಿರ್ದೇಶಕ ಸಂಗಪ್ಪ, ಡಿಸಿಎಂ ಆಪ್ತಕಾರ್ಯದರ್ಶಿ ವಿ. ಶ್ರೀನಿವಾಸ ಮತ್ತಿತರರು ಉಪಸ್ಥಿತರಿದ್ದರು.