ವಿನಯ ಕುಲಕರ್ಣಿ ಬಂಧನ- ಜಗದೀಶ ಶೆಟ್ಟರ ಹೇಳಿದ್ದೇನು..!
1 min read
ಧಾರವಾಡ: ಕಾಂಗ್ರೆಸನವರಿಗೆ ಈಗ ಮಾತನಾಡಲು ಬೇರೆ ವಿಷಯಗಳಿಲ್ಲ. ಹೀಗಾಗಿ ಎಲ್ಲದರಲ್ಲೂ ಅವರು ರಾಜಕೀಯ ಮಾಡುತ್ತಾರೆ. ಸಿಬಿಐ, ಇಡಿ ದಾಳಿಯಾದರೆ ರಾಜಕೀಯ ಎನ್ನುತ್ತಿದ್ದಾರೆ. ಸಿದ್ದರಾಮಯ್ಯನವರಿಗೆ ಬೇರೆ ವಿಷಯಗಳಿಲ್ಲ ಎಂದು ಮಾಜಿ ಸಿಎಂ ಹಾಗೂ ಹಾಲಿ ಸಚಿವ ಜಗದೀಶ ಶೆಟ್ಟರ ಹೇಳಿದರು.
ಜಗದೀಶ ಶೆಟ್ಟರ ಹೇಳಿದ್ದೇನು.. ಇಲ್ಲಿದೆ ನೋಡಿ..
ಸಿದ್ಧರಾಮಯ್ಯ ಸಿಎಂ ಆಗಿದ್ದವರು. ಜವಾಬ್ದಾರಿ ಸ್ಥಾನದಲ್ಲಿದ್ದವರು. ಯೋಚನೆ ಮಾಡಿ ಮಾತನಾಡಬೇಕು. ಉಪಚುನಾವಣೆಯಲ್ಲಿ ಅವರಿಗೆ ಹಿನ್ನೆಡೆಯಾಗಲಿದೆ. ಎಕ್ಸಿಟ್ ಪೋಲ್ ಗಳಲ್ಲಿಯೇ ಇದು ತಿಳಿದು ಬಂದಿದೆ. ಎಕ್ಸಿಟ್ ಪೋಲ್ ಪ್ರಕಾರ ಹಿನ್ನೆಡೆ ಆರಂಭವಾಗಿದೆ. ಕಾಂಗ್ರೆಸ್ ಅಧೋಗತಿ ಆರಂಭವಾಗಿದೆ. ಹೀಗಾಗಿ ವಿನಯ ಬಂಧನ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಅನ್ಯಾಯವಾಗಿದ್ದರೆ ಕೋರ್ಟ್ಗೆ ಹೋಗಲಿ ಎಂದು ಹೇಳಿದರು.
ಸಿಬಿಐ, ಇಡಿ ಇಲಾಖೆ ಸರಕಾರದ ಅಡಿಯಲ್ಲಿಯೇ ಕೆಲಸ ಮಾಡಬೇಕಲ್ಲವೇ.?. ಯುಪಿಎ ಸರಕಾರದ ವೇಳೆಯಲ್ಲಿ ಜನಾರ್ದನರೆಡ್ಡಿ ಬಂಧನವಾಗಲಿಲ್ಲವೇ.? ಅವರನ್ನು ಜೈಲಿನಲ್ಲಿ ಇಡಲಿಲ್ಲವೇ.? ಆಗ ಯುಪಿಎ ಸರಕಾರ ಇತ್ತಲ್ಲವೇ.? ಕಾಂಗ್ರೆಸ್ ನವರು ಇಷ್ಟು ವರ್ಷ ದೇಶವನ್ನು ಆಳಿದ್ದಾರೆ. ಅವರು ಎಲ್ಲವೂ ನಡೆಯುತ್ತೆ ಅಂದುಕೊಂಡಿದ್ದರು. ಆದರೆ, ಇವತ್ತು ತನಿಖೆ ನಡೆಯುತ್ತಿದೆ. ಹೀಗಾಗಿ ಏನು ಮಾಡಬೇಕೆನ್ನೋದು ಗೊತ್ತಾಗುತ್ತಿಲ್ಲ. ತಪ್ಪು ಮಾಡದಿದ್ದರೆ ಹೆದರೋ ಅವಶ್ಯಕತೆ ಇಲ್ಲ ಎಂದು ಹೇಳಿದರು.
ವಿನಯ ಕುಲಕರ್ಣಿಯವರಿಗೆ ಸ್ವಾಮಿಗಳ ಬೆಂಬಲ ವಿಚಾರವಾಗಿ ಮಾತನಾಡಿದ ಜಗದೀಶ ಶೆಟ್ಟರ, ಇಂಥ ಪ್ರಕರಣಗಳನ್ನು ಧರ್ಮಕ್ಕೆ, ರಾಜಕೀಯಕ್ಕೆ ಬಳಸಿಕೊಳ್ಳಬಾರದು. ಹಾಗೆ ಮಾಡೋದು ತಪ್ಪು. ಸಿಬಿಐ ತಪ್ಪು ಮಾಡಿದ್ದರೆ ಕೋರ್ಟ್ಗೆ ಹೋಗಲಿ ಎಂದು ಶೆಟ್ಟರ ಹೇಳಿದರು.